Tuesday, April 9, 2013

ಓ ಕವಿಯೆ ದಮ್ಮಯ್ಯಾ..


ನೆತ್ತರಿನ ಹಿಂಸೆಯನು; ಜಗ ಡೊಂಬರಾಟವನು
ಬರೆದ ಕವಿಗಳಿಗೆಲ್ಲ ಹೆಮ್ಮೆಯೇಕೆ?
ಅತ್ತವರ ಅಳಿಸುವ ತಪ್ಪೆಂದು ಬೈಯ್ಯುವ
ಕವಿಯ ಬರಹಕ್ಕೆಲ್ಲ ದೊಡ್ಡ ಟೀಕೆ.

ಯಾರು ಸತ್ತರು ಸರಿಯೆ ಕರುಣರಸ ಉಕ್ಕೀತು
ಹರಿದೀತು ಕವಿಯದನಿ ಸಾಲುಗಳಲಿ
ಸತ್ತವನ ಸಂಬಂಧಿ ಉಸಿರನಾಡುವುದೇಕೆ?
ಅವನ ಎಳೆದರು ಹಿಡಿ ಸಂತಾಪ ಚೆಲ್ಲಿ;

ಬಡತನದ ವರದಿಯನು ಸೊಗಸಾಗಿ ಪ್ರತಿಮೆಯಲಿ
ಹಿಡಿದಿಟ್ಟು ಗಳಿಸಿದನು ಸಭೆಯ ಸದ್ಧು
ಬಡವ ಬೇಡಲು ಬಂದ; ಕಣ್ಣೀರು ಗರೆದರೂ
ಕವಿ ತಾನು ತಿರುಗದವ, ಹೋದ ಎದ್ದು.

ಬೈಯ್ಯುವುದು ಬೇಯುವುದು ಕವಿಯ ಶಬ್ಧಗಳಲ್ಲಿ
ದೇಶದುದ್ದಾರಕ್ಕೆ ಕವಿಯೆ ದೇವ;
ಇವನ ಕಾಣ್ಕೆಯ ಕೊರತೆ ಇದ್ದಂದು ದೇಶದಲಿ
ಬುದ್ಧಿಯಾ ಶೂನ್ಯತೆ? ಹ್ಮ್ ಅಭಾವ.

ನಾಲ್ಕು ನಲ್ಮೆಯ ಮಾತು; ಜೊತೆಗೆ ಪ್ರೀತಿಯ ಮುತ್ತು
ಪಡೆವ ಬರೆಯುವ ಕವಿಗೆ ಜೀವ ಇತ್ತು!
ನಾನು ಟೀಕೆಯ ಬರೆವೆ ಆ ವಿಮರ್ಷೆಗೆ ದಣಿವೆ
ನನಗೆ ನವ್ಯದ ಕಾವ್ಯ ಸ್ವಾರ್ಥ ತುತ್ತು."

1 comment:

sunaath said...

ಇದು ಪೂರ್ವಾಗ್ರಹವಲ್ಲವೇ, ತಮ್ಮಯ್ಯಾ?!