Saturday, June 6, 2015

ಓ ಲಕ್ಷ್ಮಣಾ!

ಇಲ್ಲಿ ಬಳ್ಳಿಯ ತೂಗಿ; ವಲ್ಕಲವ ಹಾಸುವೆನು ಗಾಳಿ ಬೀಸದೆ ಇರಲಿ ಎಂದುಕೊಳುತ ಬಿರುಗಾಳಿ ಬಂದೆರಗಿ ನಾರುಮಡಿ ಬೀಳುತಲೆ ಜಾನಕಿಯು ಕೂಗಿದಳು- ಓ ಲಕ್ಷ್ಮಣಾ! ಚಿನ್ನಜಿಂಕೆಯ ವೇಷ ರಕ್ಕಸನು ಹೊರಬಂದು ತನ್ನಳಿಯ ಕೊಟ್ಟಿರುವ ಕೆಲಸವಾಗೆ, ಮುಂದುಗಾಣದೆ ಮೋಕ್ಷ ರಾಮಬಾಣಕೆ ಒರಗಿ ಮಾರೀಚ ಕೂಗಿದನು - ಓ ಲಕ್ಷ್ಮಣಾ! ಮಂಕುಕವಿದಿತು ಭೂಮಿ, ಮೃದುಲತಾಂಗಿಯು ಎಲ್ಲಿ? ಕಾವಲಿರು ನಿನಗೆಂದೆ, ಏಕೆ ಬಂದೆ? ಎಲ್ಲಿ ಹೋಗಿಹಳೆನ್ನ ಆತ್ಮದರಗಿಣಿ ಸೀತೆ? ಶ್ರೀರಾಮ ಮರುಗಿದನು - ಓ ಲಕ್ಷ್ಮಣಾ! ಇಂದ್ರಾರಿ ಬಂದನಿದೊ ಉರಿಸಿಡಿಲ ನೂರು ಶರ ಇವನ ಯಾಗಕೆ ಹತವು ನಮ್ಮ ಸೇನೆ. ಉಪವಾಸನಿರತನೀ ವರಯೋಗಿ ಸೋದರನೆ ರಾಮಕಾರ್ಯಕೆ ಸಲ್ಲು- ಓ ಲಕ್ಷ್ಮಣಾ! ಕಾಲಪುರುಷನು ಬಂದ; ಬಾಗಿಲನು ತೆರೆಯೆಂದ ಗುಟ್ಟು ಪೇಳಲು ಕಾಯ್ವ ಭಟನ ಕೇಳ್ದ. ಒಳಗೆ ಬರುವುದಕಿಲ್ಲ, ಮರಣದಂಡನೆ ಶಿಕ್ಷೆ ಎಚ್ಚರದಿ ಕಾಯೆನುತ - ಓ ಲಕ್ಷ್ಮಣಾ! ರಸಿಕರೇ ಜೊತೆಗಿರಲಿ ಮಿತ್ರನಂದದಿ ಬಂದೆ ರಾಮಜೀವನದಂತೆ ನಿನ್ನದೇನಾ! ರಾಮನವಮಿಯ ದಿನಕೆ ನಿನ್ನ ನೆನೆವುದು ಮನವು ನಿನ್ನ ಕಾಣ್ಕೆಯೆ ದಿಟವು- ಓ ಲಕ್ಷ್ಮಣಾ!

No comments: