ಇಲ್ಲಿ ಬಳ್ಳಿಯ ತೂಗಿ; ವಲ್ಕಲವ ಹಾಸುವೆನು
ಗಾಳಿ ಬೀಸದೆ ಇರಲಿ ಎಂದುಕೊಳುತ
ಬಿರುಗಾಳಿ ಬಂದೆರಗಿ ನಾರುಮಡಿ ಬೀಳುತಲೆ
ಜಾನಕಿಯು ಕೂಗಿದಳು- ಓ ಲಕ್ಷ್ಮಣಾ!
ಚಿನ್ನಜಿಂಕೆಯ ವೇಷ ರಕ್ಕಸನು ಹೊರಬಂದು
ತನ್ನಳಿಯ ಕೊಟ್ಟಿರುವ ಕೆಲಸವಾಗೆ,
ಮುಂದುಗಾಣದೆ ಮೋಕ್ಷ ರಾಮಬಾಣಕೆ ಒರಗಿ
ಮಾರೀಚ ಕೂಗಿದನು - ಓ ಲಕ್ಷ್ಮಣಾ!
ಮಂಕುಕವಿದಿತು ಭೂಮಿ, ಮೃದುಲತಾಂಗಿಯು ಎಲ್ಲಿ?
ಕಾವಲಿರು ನಿನಗೆಂದೆ, ಏಕೆ ಬಂದೆ?
ಎಲ್ಲಿ ಹೋಗಿಹಳೆನ್ನ ಆತ್ಮದರಗಿಣಿ ಸೀತೆ?
ಶ್ರೀರಾಮ ಮರುಗಿದನು - ಓ ಲಕ್ಷ್ಮಣಾ!
ಇಂದ್ರಾರಿ ಬಂದನಿದೊ ಉರಿಸಿಡಿಲ ನೂರು ಶರ
ಇವನ ಯಾಗಕೆ ಹತವು ನಮ್ಮ ಸೇನೆ.
ಉಪವಾಸನಿರತನೀ ವರಯೋಗಿ ಸೋದರನೆ
ರಾಮಕಾರ್ಯಕೆ ಸಲ್ಲು- ಓ ಲಕ್ಷ್ಮಣಾ!
ಕಾಲಪುರುಷನು ಬಂದ; ಬಾಗಿಲನು ತೆರೆಯೆಂದ
ಗುಟ್ಟು ಪೇಳಲು ಕಾಯ್ವ ಭಟನ ಕೇಳ್ದ.
ಒಳಗೆ ಬರುವುದಕಿಲ್ಲ, ಮರಣದಂಡನೆ ಶಿಕ್ಷೆ
ಎಚ್ಚರದಿ ಕಾಯೆನುತ - ಓ ಲಕ್ಷ್ಮಣಾ!
ರಸಿಕರೇ ಜೊತೆಗಿರಲಿ ಮಿತ್ರನಂದದಿ ಬಂದೆ
ರಾಮಜೀವನದಂತೆ ನಿನ್ನದೇನಾ!
ರಾಮನವಮಿಯ ದಿನಕೆ ನಿನ್ನ ನೆನೆವುದು ಮನವು
ನಿನ್ನ ಕಾಣ್ಕೆಯೆ ದಿಟವು- ಓ ಲಕ್ಷ್ಮಣಾ!
No comments:
Post a Comment